Archive for the ‘media’ Category
-ಸುಧನ್ವಾ
sudhanva.deraje@vplco.org
ಲಾಲ್ ಬಾಗಿನ ಮೂಲೆಯ ಬೆಂಚಿನ ಮೇಲೆ ಕುಳಿತ ಎರಡು ಹಿರಿಯ ಜೀವಗಳು. ಜೀವನ ಪೂರ್ತಿ ಅನ್ಯಾಯಗಳಿಗೆ ಸೆಟೆದು ನಿಂತ ಜೀವ ಒಂದು. ಜೀವನ ಕೊಟ್ಟಿದ್ದನ್ನು ಯಥಾವತ್ತಾಗಿ ಸ್ವೀಕರಿಸಿದ ಜೀವ ಇನ್ನೊಂದು. ಪರೋಪಕಾರಕ್ಕಾಗಿಯೇ ತನ್ನ ಜೀವವಿರುವುದು ಎಂದು ನಂಬಿದ ಜೀವ ಒಂದಾದರೆ, ತನ್ನ ತನ್ನ ಪಾಡಿಗೆ ತಾನಿದ್ದು ಬಿಡುವುದೇ ಜೀವನ ಧರ್ಮ ಎಂದು ನಂಬಿದ ಜೀವ ಮತ್ತೊಂದು. ಎರಡೂ ಜೀವಗಳು ಜೀವನದ ಇಳಿಜಾರಿನತ್ತ ಮುಖ ಮಾಡಿವೆ. ಆದರೂ ಜೀವನೋತ್ಸಾಹ ಬತ್ತಿಲ್ಲ. ಇಬ್ಬರೂ ಹೊಡೆದಾಡುತ್ತಾರೆ. ಮತ್ತೆ ಒಂದಾಗುತ್ತಾರೆ. ಒಬ್ಬರನ್ನೊಬ್ಬರು ಹೀಯಾಳಿಸುತ್ತಾರೆ. ಹಳೆಯ ನೆನಪುಗಳಿಗೆ ಜಾರುತ್ತಾರೆ. ಇಂದಿನ ತಮ್ಮ ಸ್ಥಿತಿಯನ್ನು ಚರ್ಚೆಗಿಡುತ್ತಾರೆ. ತಮ್ಮ ತಮ್ಮ ಶಕ್ತಿಯಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ. ಪಾಪ ಪ್ರಜ್ಞೆಯಲ್ಲಿ ನರಳುತ್ತಾರೆ. ಕಾಲ ಬದಲಾಗುತ್ತದೆ. ಮನುಷ್ಯನ ಚಹರೆ ಬದಲಾಗುತ್ತದೆ. ಆದರೆ ಮನಸ್ಸನ್ನು ಆವರಿಸಿದ ಗೆಳೆತನ ಬದಲಾಗಬಲ್ಲುದೇ? ಹೀಗೆ ಹೇಳಿಕೊಂಡು ಎಸ್.ಸುರೇಂದ್ರನಾಥ್ ನಿರ್ದೇಶಿಸಿರುವ ನಾಟಕ ‘ನಾ ತುಕಾರಾಂ ಅಲ್ಲ’
ಈ ಮೊದಲು ‘ನಾನೀನಾದರೆನಾನೀನೇನಾ’, ‘ಸಂಕ್ರಮಣ’ದಂತಹ ಯಶಸ್ವಿ ನಾಟಕಗಳನ್ನು ಕೊಟ್ಟ ‘ಸಂಕೇತ’ತಂಡ, ಹಳೆಯ ಘನತೆಯಲ್ಲೇ ರಂಗಶಂಕರದಲ್ಲಿ ಮತ್ತೆ ಪ್ರತ್ಯಕ್ಷವಾಗಿದೆ. ಕಿರುತೆರೆ-ಹಿರಿತೆರೆಗಳ ಅನುಭವಿಗಳಾದ ಬಿ. ಸುರೇಶ, ಏಣಗಿ ನಟರಾಜ, ಮೇಘಾ ನಾಡಿಗೇರ್, ಸಿಹಿಕಹಿ ಚಂದ್ರು ಈ ನಾಟಕದ ರಂಗಮಂಚದಲ್ಲಿದ್ದಾರೆ. ಬಾಲಾಜಿ ಮನೋಹರ್, ಮೇಧಾ ದೀಕ್ಷಿತ್ ಹೊಸ ಮುಖಗಳು. ಶಶಿಧರ ಅಡಪರ ರಂಗಸಜ್ಜಿಕೆ, ಶ್ರೀನಿವಾಸ ಜಿ. ಕಪ್ಪಣ್ಣರ ಬೆಳಕಿನ ವಿನ್ಯಾಸ, ಪ್ರವೀಣ್ ಗೋಡ್ಖಿಂಡಿ ಸಂಗೀತ ಹೀಗೆ ಮಹಾರಥರ ದಂಡು ಹಿಂದಿದೆ. ‘ಬದುಕು ಚಿಕ್ಕದಾಗಿರೋದು ಸಮಸ್ಯೆಯಲ್ಲ ಕಂದಾ, ಬದುಕು ಅಗತ್ಯಕ್ಕಿಂತ ಉದ್ದವಾಗಿರೋದೇ ಸಮಸ್ಯೆ’ ಅನ್ನುವುದೇ ಈ ನಾಟಕದ ಒಟ್ಟಂಶ ಎನ್ನುವ ನಿರ್ದೇಶಕ ಸುರೇಂದ್ರನಾಥ ಹರ್ಬ್ ಗಾರ್ಡನ್ ‘ಐಆಮ್ ನಾಟ್ ರಿಪೋರ್ಟರ್ ‘ ಆಧರಿಸಿ ‘ನಾ ತುಕಾರಾಂ ಅಲ್ಲ’ ಹೆಣೆದಿದ್ದಾರೆ.
ಸಾಮಾನ್ಯವಾಗಿ ಈ ನಾಟಕದ ಪ್ರೇಕ್ಷಕರೆಲ್ಲ ಮೂಲ ನಾಟಕವನ್ನು ಗಮನಿಸದಿರುವುದರಿಂದ ಹೋಲಿಕೆಗಳಿಗೆ ಆಸ್ಪದವಿಲ್ಲ. ಮೂಲ ನಾಟಕದ ಹಿಟ್ಟನ್ನು ಇಟ್ಟುಕೊಂಡು, ಕನ್ನಡದೇ ರೂಪರಸಗಂಧಗಳ ಮೂಲಕ ಹೊಸತಿಗೆ ಹುಟ್ಟು ನೀಡಬಲ್ಲ ಸೂರಿ, ಇಂತಹ ರಿಮೇಕ್ನಲ್ಲಿ ಚೆನ್ನಾಗಿ ಪಳಗಿದವರು. ಗಿರೀಶ್ ಕಾರ್ನಾಡರಲ್ಲಿ ಹೇಗೆ ಯಯಾತಿ ಮುಂತಾದವು ಅಕ್ಷರಗಳಲ್ಲಿ ಮರುಹುಟ್ಟು ಪಡೆಯುತ್ತವೆಯೋ ಹಾಗೆ; ಇಲ್ಲಿ ರಂಗದಲ್ಲಿ ಅವು ತಾಜಾ ಆಗಿ ಕಾಣಿಸುತ್ತವೆ. ವಯಸ್ಸಾದಂತೆ ಮನುಷ್ಯರು ಮತ್ತೆ ಮಕ್ಕಳಾಗುತ್ತ ಹೋಗುತ್ತಾರೆ. ಅಂತಾರಲ್ಲ, ಅದು ನಿಜವಲ್ಲವೇನೋ ಎಂಬಂತೆ ಬೆಳೆಯುವ ನಾಟಕ ಇದು. ಇಲ್ಲಿರುವ ಇಬ್ಬರು ಮುದುಕರಿಗೆ ಎರಡು ಜಗತ್ತುಗಳಿವೆ; ನೆನಪುಗಳದ್ದೊಂದು, ವರ್ತಮಾನದ್ದು ಇನ್ನೊಂದು. ಎರಡರಲ್ಲೂ ತಾವು ಗೆಲ್ಲಬೇಕೆಂಬ ಹಠ ಅವರಿಗೆ! ಡಾ. ಶ್ರೀಪತಿ ಢಾಂಗೆ ಅಲಿಯಾಸ್ ಗುರುನಾಥ ರಾವ್ ಅಲಿಯಾಸ್ ಕೋದಂಡ (ಬಿ.ಸುರೇಶ್) ನಾಟಕದ ತುಂಬ ಮಾತಾಡುತ್ತಾನೆ. ಅವನು ಗುಮಾಸ್ತರ ಸಂಘದವನೂ ಹೌದು, ಕಮ್ಯುನಿಸ್ಟನೂ ಹೌದು, ರೌಡಿಯೂ ಹೌದು, ಜತೆಗೆ ಯಾವುದನ್ನೂ ಹೌದೌದು ಅನಿಸುವಂತೆ ಮಾಡಬಲ್ಲ ಛಾತಿಯವನೂ.
ಅವನು ಹೇಳುತ್ತಿರುವುದೆಲ್ಲ ಸುಳ್ಳು, ಅದನ್ನು ತಾನು ನಂಬಬಾರದೆಂದು ಕೃಷ್ಟಸ್ವಾಮಿ (ಏಣಗಿ ನಟರಾಜ)ಗೆ ಗೊತ್ತಿದೆ. ಆದರೂ ಮರುಳಾಗುತ್ತಾನೆ. ಯಾಕೆಂದರೆ ಒಬ್ಬನಿಗೆ ಇನ್ನೊಬ್ಬನನ್ನು ಕುಣಿಸುವುದರಲ್ಲಿ ಸುಖ ಇದೆ. ಇನ್ನೊಬ್ಬನಿಗೆ ಕಾಲಕ್ಕೆ ತಕ್ಕಂತೆ ಇರುವುದರಲ್ಲೇ ಸಮಾಧಾನವಿದೆ. ವಿರೋಧಿಯ ಎದುರು ಚಾಕು ಹಿಡಿದು ನಿಂತಾಗ ಕೃಷ್ಣಸ್ವಾಮಿಯ ದೇಹದಲ್ಲಿ ಕೋದಂಡ ಹೊಕ್ಕಿದ್ದಾನೆ. ರೌಡಿ ಪಾಂಡುವಿನಿಂದ ಕೈಕಾಲು ಮುರಿಸಿಕೊಂಡಾಗ ಕೋದಂಡನೊಳಗೆ ಕೃಷ್ಣಸ್ವಾಮಿ ಹೊಕ್ಕಿರುತ್ತಾನೆ. ಆದರೆ ಅವರಿಬ್ಬರು ಸ್ನೇಹಿತರೂ, ವೈರಿಗಳೂ! ನೀವು ಏನೇ ಅಂದರೂ ‘ನಾ ತುಕಾರಾಂ ಅಲ್ಲ’ ಎನ್ನುವ ಆಟದ ಭಾಗವಾಗಿ ಈ ಶೀರ್ಷಿಕೆ ಬಂದಿದೆ. ಹಿಂದೂ-ಮುಸ್ಲಿಂ ತಾಕಲಾಟವೇನೋ ಇದೆ ಅಂತ ನಿರೀಕ್ಷಿಸಿದವರಿಗೆ ಏನನ್ನೋ ಕಳೆದುಕೊಂಡಂತಾಗಬಹುದು. ಇಲ್ಲಿ ತುಂಬಿರುವುದು ವೃದ್ಧಾಪ್ಯದ ಸಮಸ್ಯೆಗಳು. ಆದರೆ ಇಲ್ಲಿ ಬರುವ ಮುದುಕರು, ಇವು ತಮ್ಮ ಸಮಸ್ಯೆಗಳೇ ಅಲ್ಲ ಅನ್ನುವಂತಿರುತ್ತಾರೆ! ಅವರಿಗೇನು ಬೇಕು, ಬೇಡ ಎರಡನ್ನೂ ತೋರಿಸುತ್ತಾ ಹೋಗುವ ನಾಟಕ, ಆ ಮುದುಕರಿಗೆ ಬೇಕಾದ್ದರಲ್ಲೇ ಮುಗಿಯುತ್ತದೆಯೇ?! ಅಥವಾ ಬೇಕಾದ್ದು ಬೇಡದ್ದು ಎಲ್ಲ ಇರುವುದೇ ಬದುಕೆ? ಹೋಗಿ ನೋಡುವಂತ ನಾಟಕ.
ಮಾತಿನಿಂದ ತುಂಬಿದ ಈ ವಿನೋದಮಯ ಪ್ರಯೋಗ, ಸಂಗೀತ-ರಂಗಸಜ್ಜಿಕೆಯಲ್ಲಿ ವಿಶೇಷವಿಲ್ಲದೆಯೂ ಸನ್ನಿವೇಶಗಳ ಬದಲಾವಣೆಯಲ್ಲಿ ಗೆದ್ದಿದೆ. ಮಾತಿನ ಪರಿಣಾಮಕಾರಿ ಚಲಾವಣೆಗೆ ಇನ್ನೊಂದಿಷ್ಟು ಅನುಕೂಲಗಳನ್ನು ಮಾಡಬಹುದಿತ್ತು. ನಾಟಕ ಪೂರ್ತಿ ಉದ್ಯಾನವನದ ಎರಡು ಬೆಂಚುಗಳ ಸುತ್ತಲೇ ನಡೆಯುವುದರಿಂದ, ಪ್ರದರ್ಶನದಲ್ಲಿ ಏರಿಳಿತಗಳನ್ನು ಕಾಯ್ದುಕೊಳ್ಳುವುದು ಸುಲಭವಲ್ಲ. ಏರಿಳಿತವವಿಲ್ಲದಿದ್ದರೆ ರಸ ಪ್ರವಾಹವನ್ನು ಉಳಿಸಿಕೊಳ್ಳುವುದು ಹೇಗೆ? ಹೊಸದಿಲ್ಲಿಯ ‘ಯಾತ್ರಿಕ್ ಥಿಯೇಟರ್ ಗ್ರೂಪ್’ 2000ದಲ್ಲಿ ಹರ್ಬ್ ಗಾರ್ಡನರ್ನ ರಚನೆ ಆಧರಿಸಿ ‘ಐ ಆಮ್ ನಾಟ್ ಶೇಖ್ ಚಿಲಿ’ ಎಂಬ ಹೆಸರಿನಲ್ಲಿ ಅವಿಜಿತ್ ದತ್ ನಿದರ್ೇಶನದಲ್ಲಿ ನಾಟಕ ಪ್ರದಶರ್ಿಸಿತ್ತು ಈಗ ಕನ್ನಡದೇ ಆಗಿರುವ ಈ ವಯೋವೃದ್ಧರ ನಾಟಕವನ್ನು ಕನ್ನಡದ ವಯಸ್ಕರೆಲ್ಲ ನೋಡಿ ಆನಂದಿಸಬಹುದು.
………………………………………………..
ಸೈಡ್ ವಿಂಗ್ ಗೆ ಪ್ರಾಂಪ್ಟರ್ – – ವಿಜಯ ಕರ್ನಾಟಕ.
ವಿಜಯ ಕರ್ನಾಟಕ ಕಂಡ ಸೈಡ್ ವಿಂಗ್…
Posted ಜನವರಿ 17, 2009
on:- In: media
- 2 Comments
ಸೈಡ್ ವಿಂಗ್ ನ ಪ್ರಯತ್ನವನ್ನು ಮಾಧ್ಯಮಗಳೂ ಗಮನಿಸಲಾರಂಭಿಸಿವೆ. ಇಂದಿನ ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಸೈಡ್ ವಿಂಗ್ ಕುರಿತು ಬರೆಯಲಾಗಿದೆ. ಅದರ ಪೂರ್ಣ ಪಾಠ ಇಲ್ಲಿದೆ.
ಜಯನಾಣಯ್ಯ, ಈ ಟಿವಿ ನ್ಯೂಸ್, ರಂಗಶಂಕರ!!
Posted ಜನವರಿ 12, 2009
on:ನಾಟಕಕ್ಕೂ ಮಾಧ್ಯಮಕ್ಕೂ
ಅವಿನಾಭಾವ
ಸಂಬಂಧ.
ಹಲವು ಪತ್ರಕರ್ತರು ಮಾಜಿ ನಟರಾಗಿರುವುದು ಸಾಮಾನ್ಯ.
ಇಂತಹ ಪತ್ರಕರ್ತರು ನಾಟಕದ ವರದಿಗಾರಿಕೆಗೆ ತೆರಳಿದಾಗ,
tempt ಆಗಿ ಸ್ಟೇಜ್ ಹತ್ತುವುದೂ ಅಷ್ಟೆ ಸಾಮಾನ್ಯ.
ಈ ಟಿವಿ ಪತ್ರಕರ್ತ ನಾಣಯ್ಯನವರು,ರಂಗಶಂಕರಕ್ಕೆ ಹೋದಾಗ
ಸ್ಟೇಜ್ ಹತ್ತಿ ಬಿ. ಜಯಶ್ರೀಯವರೊಂದಿಗೆ
ಸ್ಮೈಲ್ ನೀಡಿದ್ದು ಹೀಗೆ….
ತಾತ ಗುಬ್ಬಿ ವೀರಣ್ಣ, ಸದಾರಮೆ ನಾಟಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ
ಮಾಡುತ್ತಿದ್ದ ಕಳ್ಳನ ಪಾತ್ರವನ್ನು, ಇದೀಗ ಬಿ. ಜಯಶ್ರೀ ಮಾಡುತ್ತಿದ್ದಾರೆ.
ಕೆಂಡ ಸಂಪಿಗೆ ಕಂಡ ಸೈಡ್ ವಿಂಗ್….
Posted ಜನವರಿ 10, 2009
on:ನಾಟಕ ಅಂದ್ರೆ ಬರೀ ವೇದಿಕೆ ಮೇಲಿನ ಒಂದೆರಡು ಗಂಟೆ ಪ್ರದರ್ಶನವಲ್ಲ. ಅದಕ್ಕೂ ಮುನ್ನ ಸ್ಕ್ರ್ಪಿಪ್ಟ್ ರೀಡಿಂಗಿನಿಂದ ರಂಗರೂಪ, ಕಾಸ್ಟ್ಯೂಮ್, ಲೈಟು, ಮೇಕಪ್ಪು ಮಿಕ್ಕೆಲ್ಲ ಕ್ರಿಯೆಗಳನ್ನ ಒಳಗೊಂಡ ಒಂದು ರಂಗ ಪ್ರಯೋಗ. ವೇದಿಕೆ ಮೇಲೆ ಕಾಣಿಸೋದಕ್ಕೆ ಮುನ್ನ ಸಾಕಷ್ಟು ಸಿದ್ಧತೆಗಳಿಂದ ಕೂಡಿದ ಕ್ರಿಯೆ. ಹೀಗೆ ರಂಗದ ಅಕ್ಕಪಕ್ಕ ನಡೆಯೋ ಸಿದ್ಧತೆಗಳನ್ನ ಬ್ಲಾಗಿಗರ ಮುಂದಿಡುವ ಪ್ರಯತ್ನಕ್ಕೆ ಕೈ ಹಾಕಿದೆ ‘ಸೈಡ್ ವಿಂಗ್’.
ಹೆಸರೇ ಹೇಳುವಂತೆ ಇದು ರಂಗಭೂಮಿಯ ಚಟುವಟಿಕೆಗಳಿಗೆ ಮೀಸಲಾದ ಬ್ಲಾಗ್. ಕನ್ನಡ ನಾಟಕ ರಂಗದ ಸುದ್ದಿ ಸಮಾಚಾರಗಳನ್ನ ಇಲ್ಲಿ ಕಾಣಬಹುದು. ಹೊಸ ಪಾತ್ರಗಳ ಪರಕಾಯ ಪ್ರವೇಶ, ರಂಗಸಿದ್ಧತೆಗಳ ಕುರಿತ ಚಿತ್ರಣ ಇಲ್ಲಿರುತ್ತದೆ. ಹೊಸದಾಗಿ ಮತ್ತು ಮರು ಪ್ರದರ್ಶನವಾಗುವ ನಾಟಕಗಳು, ರಂಗಶಿಬಿರ ಇತ್ಯಾದಿಗಳ ಬಗ್ಗೆಯೂ ಸುದ್ದಿ ಉಂಟು. ಹೆಚ್ಚಿಗೆ ಮಾಹಿತಿ ಬೇಕಿದ್ದವರು ಸೈಡ್ ವಿಂಗಿಗೆ ಹೋಗಿಬನ್ನಿ.